
ಜಿ ಎನ್ ಮೋಹನ್ ಬೈಟ್
ಹೀಗೊಂದು ತಾಣ ಬೇಕಿತ್ತಾ...? ಇದು ಮತ್ತೊಂದು ಸಂಘಟನೆಯಾ...? ವೃತ್ತಿ ಭಾಂಧವರ ರಕ್ಷಣೆಗಾಗಿ ಹೋರಾಡುವ ಅಂಗವಾ...?
-ಈ ಎಲ್ಲಾ ಪ್ರಶ್ನೆಗಳನ್ನು Television Journalists ಆರಂಭಿಸುವ ಮುನ್ನ ಹಲವು ಕಾಲ ನನಗೆ ನಾನೇ ಕೇಳಿಕೊಂಡಿದ್ದೇನೆ. ಇದಕ್ಕೆ ನಾನು ಕಂಡುಕೊಂಡ ಸ್ಪಷ್ಟ ಉತ್ತರ-ಅಲ್ಲ.
-
ಹಾಗಾದರೆ ಈ ತಾಣದಿಂದ ಏನು ಪ್ರಯೋಜನ?
ಮಾಧ್ಯಮದ ಟ್ರಾಫಿಕ್ ಹೆಚ್ಚುತ್ತಿದೆ. ಪ್ರತೀ ದಿನ ಹೊಸ ಪೇಪರ್, ಹೊಸ ಚಾನಲ್ ಗಳ ಸುದ್ದಿ ಹರಡುತ್ತಲೇ ಇದೆ. ಆದರೆ ಇವೆಲ್ಲಾ ಗಾಳಿ ಸುದ್ದಿಗಿಂತ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಈ ಚಾನಲ್ ನಲ್ಲಿದ್ದವರು ಅಲ್ಲಿ ಹೋದರು, ಇನ್ನೊಬ್ಬರು ಇಲ್ಲಿ ಬರುತ್ತಾರೆ ಎನ್ನುವುದೂ ಅಷ್ಟೇ ಊಟದ ಜೊತೆ ನೆಂಚಿಕೊಳ್ಳಲು ಒಂದು ಸೈಡ್ ಡಿಶ್ ಮಾತ್ರ.
ಹಾಗಾದರೆ ಅಷ್ಟನ್ನು ಚರ್ಚೆ ಮಾಡಿದರೆ ಮಾತ್ರ ಸಾಕಾ?
-ಖಂಡಿತಾ ಇಲ್ಲ ಎಲೆಕ್ಟ್ರಾನಿಕ್ ಮಾಧ್ಯಮ ಪತ್ರಿಕೆಗೆ ಕೆಲಸ ಮಾಡೋದಕ್ಕಿಂತ ಭಿನ್ನ. ಆಗಲೇ ಹೇಳಿದಂತೆ ಇದು ಪ್ರತೀ ಸೆಕೆಂಡ್ ಪತ್ರಿಕೋದ್ಯಮ. ಅಷ್ಟೇ ಅಲ್ಲ ಕ್ಯಾಮೆರಾ ಹಿಡಿದು ಫೀಲ್ಡ್ ಗೆ ಇಳಿದಾಗ ಎರಗುವ ಸಮಸ್ಯೆಯೂ ಅಷ್ಟೇ ಭಿನ್ನ. ಜಟಾಪಟಿ, ಲಾಠಿ, ಕುತ್ತಿಗೆ ಪಟ್ಟಿ ಎಲ್ಲ ನಡೆದುಹೋಗುತ್ತದೆ. ಇದನ್ನು ಯಾರ ಬಳಿ ಹೇಳುವುದು, ಹಂಚಿಕೊಳ್ಳುವುದು, ಒಂದು ಪರಿಹಾರ ಮಾರ್ಗ ಹುಡುಕುವುದು. ಅದಕ್ಕೆ ಈ ತಾಣ.
ಅಷ್ಟೇ ಸಾಕಾ?
- ನೋ. ಅಷ್ಟೇ ಅಲ್ಲ. ನೋಡಿ ಮೊನ್ನೆ ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮದಲ್ಲೇ ಮೊತ್ತ ಮೊದಲ ಬಾರಿಗೆ ಎನ್ನಬಹುದಾದ ಮನ್ನಣೆ ಬಂದಿದೆ. Tv9 ಚಾನಲ್ ನ ವರದಿ ರಾಷ್ಟ್ರಮಟ್ಟದ ಗಮನ ಸೆಳೆದು ಮಾಧ್ಯಮ ದಿಗ್ಗಜ ರಾಮನಾಥ್ ಗೋಯೆಂಕಾ ಪ್ರಶಸ್ತಿ ಗಳಿಸಿದೆ. ಅದು ಗೊತ್ತಾಗುವುದು ಹೇಗೆ?. ಅಷ್ಟೇ ಅಲ್ಲ ಮಾಧ್ಯಮ ಅಕಾಡೆಮಿ ತನ್ನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಟಿ ವಿ ಪತ್ರಕರ್ತರಿಗೆ ಕೊಟ್ಟು ಗೌರವಿಸಿದೆ. ಅಷ್ಟೇ ಅಲ್ಲ ವರದಿಗಳಿಗೂ ಪ್ರಶಸ್ತಿ ಕೊಟ್ಟಿದೆ. ಆ ವರದಿ ಯಾವುದು. ಅದಕ್ಕಾಗಿಯೇ ಈ ತಾಣ. ಇಲ್ಲಿ ಆ ವರದಿಗಳ ವಿಡಿಯೋ ಕೂಡಾ ನೋಡಬಹುದು. ಪ್ರಶಸ್ತಿ ಪುನಸ್ಕಾರ ಪಡೆದ ಫೋಟೋ ಪ್ರಕಟಿಸಬಹುದು, ಇತರೆ ಗೆಳೆಯರು ಪ್ರಶಸ್ತಿ ಪಡೆದವರಿಗೆ ವಿಶ್ ಮಾಡಬಹುದು.
ಹಾಗಾದ್ರೆ ಇದು ಬರೀ ಫ್ಯಾಮಿಲಿ ಅಫೇರ್ ಅನ್ನಿ?
-ಹಾ ಒಳ್ಳೆ ಐಡಿಯಾ ಕೊಟ್ರಿ. Television Journalists ಮನೆ ಮಂದಿ ಮಾಡಿದ ಸಾಧನೆ, ಗೆದ್ದ ಬಹುಮಾನ, ಅದನ್ನೂ ಪಟ್ಟಿ ಮಾಡೋಣ.
ಇಷ್ಟೇ ಆದ್ರೆ ನಿಮ್ಮ ತಾಣಕ್ಕೆ TRP ಬಂದ ಹಾಗೆ?
-ಅಯ್ಯೋ ಅದಕ್ಕೆ ಒಂದಿ ಷ್ಟು ಐಡಿಯಾ ಇದೆ. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿರೋ ದಂಪತಿಗಳ ಪಟ್ಟಿ ಮಾಡೋಣ, ಮನೆ ಆಫೀಸು ಎರಡೂ ಹೇಗೆ ನಿಭಾಯ್ಸ್ತಾರೆ ಕೇಳೋಣ, ಅಷ್ಟೇ ಅಲ್ಲ ಕೆಲಸ ಮಾಡುವಾಗ ಆಗೋ ಅಭಾಸಗಳನ್ನ ಬರೆಸೋಣ, ಇನ್ನೊಂದ್ ವಿಷಯ ಹೊಳೀತು. ಜಯಪ್ರಕಾಶ್ ಶೆಟ್ಟಿ, ತೇಜೇಶ್ ಇದಾರಲ್ಲ ಈಟಿವಿ ನಲ್ಲಿ 'ಸರ್ಕಾರ್' ಸೀರೀಸ್ ಹುಟ್ಟುಹಾಕಿದ್ದೇ ಅವರು. ಆ ಥರಾ ಎಷ್ಟೊಂದು ಜನ ತಮ್ಮ ಕೆಲಸ ಮಾತ್ರ ಅಲ್ಲದೆ ಸುಮಾರು ಥರಾ ಚಾನಲ್ ಬೆಳಸಿರ್ತಾರೆ. ಅದನ್ನ ಕೇಳೋಣ. ಚಾನಲ್ ಹೆಡ್ಸ್ ಮೊದಲು ಏನ್ ಕೆಲಸ ಮಾಡ್ತಿದ್ರು? ಅದರಲ್ಲಿದ್ದ ಗಮ್ಮತ್ತೇನು ಕೇಳೋಣ.
ಇದೆಲ್ಲಾ ಸರಿ ಇದನ್ನ ನೀವೇ ಮಾಡಬೇಕು ಯಾಕೆ?
- ಅದೂ ಒಂಥರಾ ಸರೀನೆ ಅನ್ನಿ. 'ಎಂಟು ವರ್ಷಕ್ಕೆ ಮಗ ದಂಟು' ಅಂದ ಅಂತ ಗಾದೆ ಇದೆ. ಹಾಗೇನೇ ಎಂಟು ವರ್ಷ ಎಲೆಕ್ಟ್ರಾನಿಕ್ ಮೀಡಿಯಾ ದಲ್ಲಿ ಇದ್ದದ್ದಕ್ಕೆ ಈಗ ಇದು ಹೊಳೆದಿದೆ.
ಓ! ಟ್ಯೂಬ್ ಲೈಟೂ ಅನ್ನಿ...
-ಹಂಗೇನಿಲ್ಲ. ಆದ್ರೆ ಚಾನಲ್ ನಲ್ಲಿ ತುರಿಸ್ಕೊಳ್ಳೋಕು ಪುರುಸೊತ್ತಿರಲಿಲ್ಲ. ಇದನ್ನ ಎಲ್ಲಿ ಮಾಡ್ತಾ ಕೂರಲಿ.
ಹಾಗಾದ್ರೆ ಈಗ ತುರಿಸ್ಕೊಳ್ಳೋಕೆ ಪುರುಸೊತ್ತಿದೆ ಅನ್ನಿ...
-ನಿಮ್ಮ ಪ್ರಶ್ನೆಗಳು ಒಳ್ಳೆ ನ್ಯೂಸ್ ಚಾನಲ್ ಫೋನ್ ಇನ್ ಥರಾ ಮುಗಿಯೋದೇ ಇಲ್ಲ. ಹಾಳಾಗೋಗಿ ಅತ್ಲಾಗೆ...
BREAKING NEWS
---
ಜಿ ಎನ್ ಮೋಹನ್ ಅವರು ಹಾಳಾಗಿ ಹೋಗಿದ್ದಾರೆ ಎಂಬ ಸುದ್ದಿ ಬಂದಿದೆ